Tuesday, October 27, 2009

ಏಕಾಂಗಿ

ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ
ಕಂಬನಿ ಒರೆಸುವ ಕೈಗಳಿಲ್ಲ
ನೊಂದ ಭಾವಕೆ ಸಾಂತ್ವನ ಹೇಳುವವರಿಲ್ಲ
ಮನ ತುಂಬಿ ನಗುವ ಮನ ನನ್ನಲ್ಲಿ ಇಂದಿಲ್ಲ
ನಗಿಸುವ ಗುಣ ಯಾರಲ್ಲೂ ಇಲ್ಲ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ...

ಇರುಳಲಿ ಚಂದ್ರನ ಸುಳಿವಿಲ್ಲ
ಹಗಲೆಂಬ ಬದುಕಿನಲಿ ರವಿಯ ಬೆಳಕಿಲ್ಲ
ಕೂತಲ್ಲಿಂದ ಕದಲುವ ಮನಸ್ಸಿಲ್ಲ
ಕನಸುಗಳು ಮರಿ ಹಾಕುವ ಲಕ್ಷಣವಿಲ್ಲ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ...

ನೆನಪುಗಳನ್ನು ಇಂದು ಕಾಯುವವರಿಲ್ಲ
ಅವುಗಳದ್ದೇ ಕಾರುಬಾರು ಮನದೂರಲೆಲ್ಲಾ
ದೇವರಿಲ್ಲದ ಗುಡಿಯು, ನಿರ್ಜಿವ ಸೂರಿರುವ ಊರು
ಇಂದು ಈ ಏಕಾಂಗಿಯ ಊರಾಗಿದೆ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ...

ನಿಮ್ಮವ,
ರಾಘು.
('ಒಬ್ಬಂಟಿ'ಯಿಂದ 'ಏಕಾಂಗಿ'ಯಾಗಿ 'ಒಬ್ಬಂಟಿ'ಗಾಗಿ ಬರೆದ ಒಂದು ಸಣ್ಣ ಕವಿತೆ.)

ನೀ ನೆಡೆದ ದಾರಿಯಲ್ಲಿ

ಮೋಡದ ಬಾಗಿಲು ನೀ ತೆರೆದು
ನಮ್ಮಡೆಗೆ ನೆಡೆದು ಬಂದು
ಎಲ್ಲರ ಮುಖದಲ್ಲಿ ನಗುವಿನ ಮಲ್ಲಿಗೆಯ ಪರಿಮಳವ ಪಸರಿಸಿ
ಮತ್ಯಾಕೆ ಮೋಡಗಳ ಕಡೆಗೆ ಮುಖವ ಮಾಡಿ
ಪಯಣದ ಸೂಚನೆ ನೀಡುತಿರುವೇ

ಅಲ್ಲಿರುವುದು ಕೇವಲ ನಿನ್ನಯ ಮಂಜಿನ ಮನೆ
ಇಲ್ಲಿರುವುದು ನಿನ್ನಯ ಬಂಧು ಮಿತ್ರರಿಂದ ಕೂಡಿದ ಮಮತೆಯ ಅರಮನೆ
ಮೋಡಗಳು ನಿನ್ನನ್ನು ಕೈ ಬೀಸಿ ಕರೆದಿರಲು
ತಿರುಗಿ ಹೋಗುವ ಮನಸ್ಸು ನೀ ಮಾಡಿರಲು
ಬೇಡ ಎನ್ನು ಮನ ಕೇಳಿತು ನೀನ್ಯಾರು ಎಂದು

ನೆನಪೆಂಬ ಹಾದಿಯಲ್ಲಿ ನೀ ಮರೆಯಾದಾಗ
ನಿನ್ನದೊಂದು ಜೀವವು ನಿನಗಾಗಿ
ಚಂದಿರನ ಕೇಳುತ, ವಿಷಯವ ತಿಳಿಸು ಎಂದು ಪಿಡಿಸುತ
ಕಣ್ಣಾ ಮುಚ್ಚಾಲೆ ಆಟವ ಆಡುತಿದೆ...

ನಿಮ್ಮವ,
ರಾಘು.

Friday, October 23, 2009

ಸುಂದರ ಚಂದಿರ

ಮುದ್ದಿನ ಮಗುವೇ, ಮನೆ ನಲ್ಮೆಯ ಹೂವೇ
ನೀ ಕರೆದರೆ ಬರುವೆ, ನಿನ್ನ ಹಿಂದಲೇ ಇರುವೆ, ನಿನ್ನ ಜೊತೆಯಲೇ ನಡೆಯುವೆ ನಾನು
ನೀ ನಕ್ಕರೆ ನಗುವೇ, ನೀ ಅತ್ತರೆ ಅಳುವೇನು ನಾನು

ಮುದ್ದಿನ ಮಗುವೇ, ಮನೆ ನಲ್ಮೆಯ ಹೂವೇ
ನೀ ಕರೆದರೆ ಬರುವೆ, ನಿನ್ನ ಹಿಂದಲೇ ಇರುವೆ, ನಿನ್ನ ಜೊತೆಯಲೇ ನಡೆಯುವೆ ನಾನು...

ನಿನ್ನಯ ತೊದಲು ನುಡಿಯು ಕೇಳಲು ಸುಂದರ
ನೀ ಹಾಕುವ ಹೆಜ್ಜೆಯು ನೋಡಲು ಬಲು ಹಿತಕರ
ನೀ ಮಾಡುವ ಹಠದಲಿ ಕಾಣುವೆ ನಾ ಸುಂದರ ಚಂದಿರ
ಮುದ್ದಿನ ಮಗುವೇ, ಮನೆ ನಲ್ಮೆಯ ಹೂವು ನೀನು

ಮುದ್ದಿನ ಮಗುವೇ, ಮನೆ ನಲ್ಮೆಯ ಹೂವೇ
ನೀ ಕರೆದರೆ ಬರುವೆ, ನಿನ್ನ ಹಿಂದಲೇ ಇರುವೆ, ನಿನ್ನ ಜೊತೆಯಲೇ ನಡೆಯುವೆ ನಾನು...

ಸನ್ನೆಯ ಮಾತು, ಗೆಜ್ಜೆಯ ಸದ್ದು ಸೇರಿದೆ ಮುಗಿಲ ಮಡಿಲು
ಹೆಜ್ಜೆಯ ಗುರುತು, ನೀ ನಿಡುವ ಮುತ್ತು ತಂದಿದೆ ಹರುಷದ ಕಡಲು
ಕೊಟ್ಟನು ದೇವ ಮನೆಗೆ ವರವ ನಿನ್ನಯ ರೂಪದಲಿ
ನಗುವಿನ ಜ್ಯೋತಿ ನೀನು ಬೆಳಗು ಮನೆಯಲಿ ಸದಾ

ಮುದ್ದಿನ ಮಗುವೇ, ಮನೆ ನಲ್ಮೆಯ ಹೂವೇ
ನೀ ಕರೆದರೆ ಬರುವೆ, ನಿನ್ನ ಹಿಂದಲೇ ಇರುವೆ, ನಿನ್ನ ಜೊತೆಯಲೇ ನಡೆಯುವೆ ನಾನು...

ಎಲ್ಲಾ ಅಮ್ಮಂದಿರಿಗೆ,

ನಿಮ್ಮವ,
ರಾಘು.

Friday, October 16, 2009

ಸಮಾನತೆಯ ಬೆಳಕು

ಕತ್ತಲೆಯ ಮಾಯೆಯ ಅಳಸಲು ಬಂದ ಜ್ಞಾನದ ಬೆಳಕು
ಅಜ್ಞಾನದ ಆಗರವ ತೊಳೆಯಲು ಬಂದ ಸುಜ್ಞಾನದ ಬೆಳಕು
ಮನಸ್ಸಿನ ಮನೆಯ ಮೂಲೆ ಮೂಲೆಯ ಆವರಿಸಲು ಬಂದ ನೆಮ್ಮದಿಯ ಬೆಳಕು
ಹೊಸ ನವೋಲ್ಲಾಸವನ್ನು ಹಣತೆ ದೀಪದಲಿ ಹರಡಲು ಬಂದ ಬೆಳಕು ಈ ದೀಪಾವಳಿಯ ಬೆಳಕು
ಕತ್ತಲೆಯ ಮಾಯೆಯ ಅಳಸಲು ಬಂದ ಜ್ಞಾನದ ಬೆಳಕು
ಅಜ್ಞಾನದ ಆಗರವ ತೊಳೆಯಲು ಬಂದ ಸುಜ್ಞಾನದ ಬೆಳಕು...

ಶತ ಶತಮಾನದಿಂದ ನೆಡದು ಬಂದ ಬೆಳಕು, ಹೊಸ ಹೊಸ ಕನಸ ಹಚ್ಚಿದ ಬೆಳಕು
ಬಾನ ಬಯಲ ಸೀಮೆಯಲ್ಲಿ ಕುಣಿಯುವ ಬಣ್ಣಗಳ ಬೆಳಕು
ನೀನ್ಯಾರು, ನಾನ್ಯಾರು ಎನ್ನುವ ಬೇಧ ಭಾವ ಮಾಡದೇ ಚೆಲ್ಲುವ ಸಮತೆಯ ಬೆಳಕು
ಶತ ಶತಮಾನದಿಂದ ನೆಡದು ಬಂದ ಬೆಳಕು, ಹೊಸ ಹೊಸ ಕನಸ ಹಚ್ಚಿದ ಬೆಳಕು ಈ ದೀಪಾವಳಿಯ ಬೆಳಕು...

ಮನೆಮಂದಿಯೆಲ್ಲಾ ಒಂದಡೆಗೆ ಸೇರಿದಾಗ ನಗುವ ಹಂಚಲು ಬರುವ ಬೆಳಕು
ಊರೆಲ್ಲಾ ಬೆಳಗಲು ಮುಂದಾಗುವ ಆಕಾಶದೀಪದ ಬೆಳಕು
ಕಹಿಯ ಸುಟ್ಟು, ಕಷ್ಟಗಳ ಕಳೆದು, ಮನವ ಬೆಳಗುವ ಬೆಳಕು ಈ ದೀಪಾವಳಿಯ ಬೆಳಕು
ಕತ್ತಲೆಯ ಮಾಯೆಯ ಅಳಸಲು ಬಂದ ಜ್ಞಾನದ ಬೆಳಕು
ಅಜ್ಞಾನದ ಆಗರವ ತೊಳೆಯಲು ಬಂದ ಸುಜ್ಞಾನದ ಬೆಳಕು ಈ ದೀಪಾವಳಿಯ ಬೆಳಕು...

ನಿಮ್ಮವ,
ರಾಘು.

Thursday, October 15, 2009

ನಿನ್ನ ನಗು

ನಿನ್ನ ನಗುವಿಗಿ೦ತ ನಿನ್ನ ಕೋಪ ನಿನಗೆ ಚ೦ದ ಕಣೆ
ನಿನ್ನ ಮುದ್ದು ಮುಖಕ್ಕಿ೦ತ ನಿನ್ನ ನಿರ್ಮಲ ಮನಸ್ಸು ನಿನಗೆ ಸೊಬಗು ಕಣೆ
ಯಾವ ಹುಡುಗಿಯಲ್ಲೂ ಕಾಣದ ಸ್ವಲ್ಪ ಸಿಟ್ಟಿನ ಮನಸ್ಸಿನ ಮಿನಿಗುತಾರೆ ನೀನೆ ಕಣೆ
ನಿನ್ನ ನಗುವಿಗಿ೦ತ ನಿನ್ನ ಕೋಪ ನಿನಗೆ ಚ೦ದ ಕಣೆ
ನಿನ್ನ ಮುದ್ದು ಮುಖಕ್ಕಿ೦ತ ನಿನ್ನ ನಿರ್ಮಲ ಮನಸ್ಸು ನಿನಗೆ ಸೊಬಗು ಕಣೆ...

ನಿನ್ನ ರೂಪ ನೋಡಿ ನಾಚಿ ಮರೆಯಗುವನು ಚ೦ದ್ರ ಬಿಳಿ ಮೋಡದ ಒಳಗೆ
ನಿನ್ನ ಮಾತು ಕೇಳಲು ಬೇಡಿರುವನು ಮಳೆರಾಯ ಧರೆಯ ಆಸರೆಯನು
ಮಲ್ಲಿಗೆ ಹೂವುಗಳು ಹ೦ಬಲಿಸಿ ತುದಿಗಾಲಲಿ ನಿ೦ತಿರುವವು ನಿನ್ನ ಮುಡಿಗೆ ಒರಗಲು
ಯತ್ನಿಸಿರುವುದು ತ೦ಗಾಳಿ ಅಲೆ ಅಲೆಯಾಗಿ ತೇಲುತ್ತ ನಿನ್ನೆಡೆಗೆ ಬರಲು
ನಿನ್ನ ನಡಿಗೆಯ ನೋಡಿ ನಿ೦ತಲ್ಲಿಯೇ ಕನಸು ಕ೦ಡವು ಸಾಲು ಮರಗಳು ಸಾಲು ಸಾಲಾಗಿ
ನಿನ್ನ ನಗುವಿಗಿ೦ತ ನಿನ್ನ ಕೋಪ ನಿನಗೆ ಚ೦ದ ಕಣೆ
ನಿನ್ನ ಮುದ್ದು ಮುಖಕ್ಕಿ೦ತ ನಿನ್ನ ನಿರ್ಮಲ ಮನಸ್ಸು ನಿನಗೆ ಸೊಬಗು ಕಣೆ....

ನೀ ಅತ್ತರೆ ನಿನ್ನ ನಗಿಸಲು ಬರುವವು ತಾರೆಗಳು ಮೋಡಗಳ ತೂರಿ
ನೀ ನಕ್ಕರೆ ನಿನ್ನ ನಗುವಿನ ಚ೦ದ ನೋಡಲು ಬರುವವು ಮಳೆಯು ಹನಿ ಹನಿಯಾಗಿ
ಮಿ೦ಚಿ ಮರೆಯಾಗುವ ನಿನ್ನ ಕೋಪ
ಉಕ್ಕಿ ಹರಿದು ಕಡಲು ಸೇರುವ ನಿನ್ನ ನಗು ನನಗೆ ಬಲು ಇಷ್ಟ ಕಣೆ....

ನಿಮ್ಮವ,
ರಾಘು.

Wednesday, October 14, 2009

ಮನದ ತುಡಿತ

ಎದೆಯ ಒಡಲಿಗೆ ಇ೦ದು ಏನೋ ಆಗಿದೆ
ಮನದ ತುಡಿತ ಕಣ್ಣ ತುದಿ ಸೇರಿದೆ
ಒಲವಿನ ಮಳೆಯು ಮನದೂರನ್ನು ತೊಯ್ದುಕೊ೦ಡು ಹೋಗಿದೆ
ಮಾತಿಗಿ೦ತ ಮೌನವೇ ಇ೦ದು ಎಲ್ಲೆ ಮೀರಿದೆ
ಎದೆಯ ಒಡಲಿಗೆ ಇ೦ದು ಏನೋ ಆಗಿದೆ
ಮನದ ತುಡಿತ ಕಣ್ಣ ತುದಿ ಸೇರಿದೆ...

ಕೇಳದೇ ಬಿದ್ದಿರುವ ಕನಸಿನ ಒಳನೋಟವ ಹುಡುಕುವ ಪ್ರಯತ್ನ ಮನದಲ್ಲಿ ಸಾಗಿದೆ
ತಿಳಿಸದೇ ಬ೦ದಿರುವ ಪ್ರೀತಿಯ ಸಾಕುವ ಕೆಲಸ ಎದೆಯಲ್ಲಿ ನಡೆದಿದೆ
ಕಣ್ಣೀರನ್ನು ಹಿಡಿಯುವ ಭಾಗ್ಯ ಕೈಗಳಿಗೆ ದೊರೆತಿದೆ
ವರ್ಣಮಯ ಜಗತ್ತಿಗಿ೦ತ ಮೌನಮಯ ಜಗತ್ತು ನನಗೆ ಕೊ೦ಚ ಇಷ್ಟವಾಗಿದೆ...

ಕಣ್ಣಿಗೆ ಕಾಣಿಸದ ನೋವು ಎದೆಯಲ್ಲಿ ಅಡಗಿ ಕುಳಿತಿದೆ
ತಳಮಳದ ಉಸಿರಿಗೆ ಮೌನವೂ ಇ೦ದು ಜೀವ ತು೦ಬಿದೆ
ಪುಟ್ಟ ಪುಟ್ಟ ಕನಸುಗಳು ದಣಿವಿಲ್ಲದೆ ಬೆಟ್ಟದ ಹಾಗೆ ಬೆಳೆದು ನಿ೦ತು
ಇದು ಯುಗ ಯುಗದ ನ೦ಟು ಎ೦ದು ತಿಳಿ ಹೇಳಿದೆ
ಎದೆಯ ಒಡಲಿಗೆ ಇ೦ದು ಏನೋ ಆಗಿದೆ
ಮನದ ತುಡಿತ ಕಣ್ಣ ತುದಿ ಸೇರಿದೆ...

ನಿಮ್ಮವ,
ರಾಘು.